Monday 21 September 2015

Chakravarti sulibele

ಒಂದೆರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಸಿಕ್ಕ ಸಾಧುವೊಬ್ಬರು ‘ವಂದೇ ಮಾತರಂ’ನ್ನು ಮಂತ್ರವೆಂದು ಕರೆದು ಬಲು ಹೊತ್ತು ವಾರ್ತಾಲಾಪ ನಡೆಸಿದ್ದರು. ಮೊದಮೊದಲಿಗೆ ಶ್ರದ್ಧೆಯಿಂದಾಗಿ ಹಾಗೆ ಹೇಳುತ್ತಿದ್ದಾರೆಂದು ಭಾವಿಸಿದರೂ ಅವರು ಕೊಟ್ಟ ಕಾರಣ ಮಾತ್ರ ಅಪರೂಪದ್ದಾಗಿತ್ತು.

ಕೋ ಪ ಬಂದಾಗ ಏನು ಮಾಡಬೇಕು? ಈ ಪ್ರಶ್ನೆಗೆ ಒಂದು ಸಿದ್ಧ ಉತ್ತರವಿದೆ. ಹತ್ತರಿಂದ ಒಂದರವರೆಗೆ ಉಲ್ಟಾ ಲೆಕ್ಕ ಹಾಕಬೇಕು. ನಿಮ್ಮಲ್ಲಿ ಅನೇಕರು ಇದನ್ನು ಪ್ರಯೋಗಿಸಿ ಲಾಭ ಪಡಕೊಂಡಿರಬೇಕಲ್ಲವೆ? ಕೋಪ ಬಂದಾಕ್ಷಣ ಲೆಕ್ಕ ಹಾಕಬೇಕೆನ್ನುವ ಉಪಾಯವನ್ನು ಮರೆತು ಬಿಡಬಾರದಷ್ಟೇ. ಆಧುನಿಕ ಯುಗದ ಎಲ್ಲ ವ್ಯಕ್ತಿತ್ವ ವಿಕಸನ ತರಬೇತುದಾರರೂ ಇದನ್ನು ತಪ್ಪದೇ ಹೇಳಿಕೊಡುತ್ತಾರೆ. ನಾವೂ ಸಾವಿರಾರು ರೂಪಾಯಿ ಹಣ ತೆತ್ತು ಪಾಠ ಕೇಳುತ್ತೇವೆ. ಆದರೆ ನಮ್ಮ ಅಜ್ಜಿ ವಿಷ್ಣು ಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮಗಳ ಮೂಲಕ ಇದೇ ಲಾಭ ಪಡೆಯುವ ಮಾತನಾಡಿದರೆ ಮೂಢನಂಬಿಕೆ ಎನ್ನುತ್ತೇವೆ; ವಿಪರ್ಯಾಸ!ನಮ್ಮ ಮನಸ್ಸಿನ ಭಾವನೆಗಳಿಗೆ ತಕ್ಕಂತೆ ಮಿದುಳು ಅಂಗಗಳಿಗೆ ಸಂದೇಶ ಕೊಡುತ್ತದೆ. ಅದಕ್ಕೆ ತಕ್ಕಂತೆ ಹಾರ್ಮೋನುಗಳು ಸ್ರವಿಸಲ್ಪಡುತ್ತವೆ. ಈ ಹಾರ್ಮೋನುಗಳ ಒಸರುವಿಕೆಗೆ ಪೂರಕವಾದ ಕ್ರಿಯೆ ನಡೆಯದಿದ್ದರೆ ಅವೇ ದೇಹಕ್ಕೆ ಹೊರೆಯಾಗಿ ಬಿಡುತ್ತವೆ.

ಪಟ್ಟಣಿಗರಿಗೆ ಮಾನಸಿಕ ಖಿನ್ನತೆ ಉಂಟಾಗುವ ಮುಖ್ಯಕಾರಣವೇ ಇದು. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದವ ಕೋಪದಿಂದ ಕುದ್ದು ಹೋಗುತ್ತಿರುತ್ತಾನೆ. ಅದಕ್ಕೆ ಪೂರಕವಾದ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಆದರೆ, ಅದು ಹೊಡೆದಾಟ-ಬಡಿದಾಟವಾಗಿಯೋ ಕೊನೆಯ ಪಕ್ಷ ಬೈಗುಳವಾಗಿಯೋ ಪರಿವರ್ತಿತವಾಗಿ ಬಿಟ್ಟರೆ ಹಾರ್ಮೋನುಗಳಲ್ಲಿ ರಾಸಾಯನಿಕಗಳು ತಮ್ಮ ಕೆಲಸ ಮುಗಿಸಿ ಲುಪ್ತವಾಗುತ್ತವೆ. ಅದ್ಯಾವುದೂ ಆಗದಿದ್ದಾಗ ಈ ರಾಸಾಯನಿಕಗಳು ಒಳಗೊಳಗೇ ಕ್ರಿಯೆ ನಡೆಸಲಾರಂಭಿಸುತ್ತವೆ. ನಿರಂತರವಾದ ಈ ಕ್ರಿಯೆಯಿಂದ ಮಿದುಳು ಘಾಸಿಗೊಂಡು ಖಿನ್ನತೆಆವರಿಸಿಬಿಡುತ್ತದೆ. ಆಮೇಲಿನದ್ದು ಗೋಳಿನ ಬದುಕೇ!ಈಗ ಹಳಬರು ಮಾಡುತ್ತಿದ್ದುದನ್ನು ಅನುಕರಿಸಿ ನೋಡಿ. ಗುರುವಿತ್ತ ಮಂತ್ರವನ್ನೋ, ಗಾಯತ್ರಿ-ಅಷ್ಟಾಕ್ಷರಿ-ಪಂಚಾಕ್ಷರಿಗಳನ್ನೋ ಅಥವಾ ಸ್ತೋತ್ರಗಳನ್ನೋ ಹೇಳಿಕೊಳ್ಳಲು ಶುರುಮಾಡಿ.

ಮಾನಸಿಕವಾಗಿ ನಡೆಯುವ ಈ ಕ್ರಿಯೆ ಹಾರ್ಮೋನುಗಳು ಸ್ರವಿಸಿದ್ದ ರಾಸಾಯನಿಕಗಳನ್ನು ಬಳಸಿಕೊಳ್ಳುತ್ತದೆ ಅಥವಾ ಮನಸ್ಸನ್ನು ಯಾವ ಹಂತಕ್ಕೊಯ್ಯುವುದೆಂದರೆ ಅನವಶ್ಯಕವಾಗಿ ದೇಹದೊಳಗೆ ರಾಸಾಯನಿಕಗಳು ಏರುಪೇರಾಗುವುದನ್ನು ತಡೆಯುತ್ತವೆ. ಇದನ್ನು ಈಚಿನ ನರವಿಜ್ಞಾನ ತಜ್ಞರೂ ಒಪ್ಪುತ್ತಾರೆ.ಮಂತ್ರಗಳನ್ನು ಹೇಳಿಕೊಳ್ಳುವುದರಿಂದ ರಾಸಾಯನಿಕಗಳು ಸ್ರವಿಸದಂತೆ ತಡೆಯುವುದು ಸಾಧ್ಯವಾದರೆ; ಸೂಕ್ತ ಮಂತ್ರಗಳ ಉಚ್ಚಾರದಿಂದ ಬೇಕಾದ ಹಾರ್ಮೋನುಗಳು ಒಸರುವಂತೆ ಮಾಡುವುದು ಕಷ್ಟವೇನು? ಖಂಡಿತ ಅಸಾಧ್ಯವಲ್ಲ! ಅದರಿಂದಾಗಿಯೇ ಕೆಲವು ಮಂತ್ರ ಸ್ತೋತ್ರಗಳ ಪಠಣದಿಂದ ದೇಹದಲ್ಲಿ ಬೆಂಕಿ ಹಚ್ಚಿದ ಅನುಭವವಾದರೆ, ಇನ್ನೂ ಕೆಲವೊಮ್ಮೆ ತಂಪಾಗಿ ಗಂಧ ಹಚ್ಚಿದ ಅನುಭೂತಿಯಾಗುತ್ತದೆ. ನಾವೂ ನಮಗೆ ಅರಿವಿಲ್ಲದಂತೆ ಕೆಲವೊಂದು ಮಂತ್ರಗಳ ಸೆಳೆತಕ್ಕೆ ಒಳಗಾಗಿಬಿಡುತ್ತೇವೆ.

ಪ್ರತಿನಿತ್ಯ ನಾಲ್ಕಾರು ಸ್ತೋತ್ರಗಳನ್ನು ಕೇಳುವ ಅಭ್ಯಾಸ ರೂಢಿ ಮಾಡಿಕೊಳ್ಳಿ. ಇವುಗಳಲ್ಲಿ ಯಾವುದೋ ಒಂದು ನಿಮ್ಮನ್ನು ಬಲುವಾಗಿ ಸೆಳೆಯುತ್ತದೆ. ಎಲ್ಲಿಯವರೆಗೆ ಅಂದರೆ ಅದನ್ನು ಕೇಳುತ್ತ ಹೋದಂತೆ ದೇಹದ ಅಂಗಾಂಗಗಳು ಅದಕ್ಕೆ ಸೂಕ್ತವಾಗಿ ಪ್ರತಿಸ್ಪಂದಿಸುವುದನ್ನು ಅನುಭವಿಸುತ್ತೀರಿ! ದೇಹ ತನಗೆ ಬೇಕಾದ್ದನ್ನು ಆಯ್ದುಕೊಳ್ಳುವ ಅತ್ಯದ್ಭುತ ವ್ಯವಸ್ಥೆ ರೂಪಿಸಿಕೊಂಡಿದೆ. ಆಯ್ಕೆಯನ್ನು ಮುಂದಿಡಬೇಕಾದ್ದು ನಮ್ಮ ಕರ್ತವ್ಯ ಅಷ್ಟೇ.ಮಂತ್ರಗಳ ಉಪಯೋಗ ಮತ್ತು ಲಾಭದ ಆಧಾರದ ಮೇಲೆ ಅದನ್ನು ಪರಾ, ಕಾಮ್ಯ ಮತ್ತು ಅಸವೆಂದು ಮೂರು ಭಾಗ ಮಾಡಬಹುದು. ಪರಾ ದೃಷ್ಟಿಯ ಮಂತ್ರಗಳು ಆಧ್ಯಾತ್ಮಿಕ ಔನ್ನತ್ಯವನ್ನು ತಂದುಕೊಡುತ್ತವೆ. ಇನ್ನು ಬಯಕೆಯನ್ನು ಹುದುಗಿಸಿಟ್ಟುಕೊಂಡು ಜಪಿಸಿದ ಮಂತ್ರಗಳು ಕಾಮ್ಯಮಂತ್ರಗಳೆನಿಸುತ್ತವೆ. ಹೆಸರೇ ಹೇಳುವಂತೆ ಶಸಗಳ ಹಿಂದೆ ಮಂತ್ರದ ಶಕ್ತಿ ಇದ್ದರೆ ಅದು ಅಸವಾಗುತ್ತದೆ!ಓಂಕಾರ ಮತ್ತು ಗಾಯತ್ರಿ ಮಂತ್ರಗಳು ಪರಾ ಮಂತ್ರಗಳೇ. ಅವುಗಳ ಜಪದಿಂದ ಮನಸ್ಸು ನಿಜಕ್ಕೂ ಶೂನ್ಯಗೊಂಡು ವಿಶ್ವಶಕ್ತಿಯೊಂದಿಗೆ ಏಕೀಭವಿಸಿ ಬಿಡುತ್ತದೆ. ಇನ್ನೂ ಕೆಲವು ಮಂತ್ರಗಳ ನಿರಂತರ ಜಪದಿಂದ ಕಾಮ್ಯ ಫಲಗಳು ಸಿದ್ಧಿಸುತ್ತವೆ.

ದಶರಥ ಪುತ್ರಕಾಮೇಷ್ಟಿ ನಡೆಸಿದ್ದು, ಪರ್ಜನ್ಯ ಜಪದಿಂದ ಮಳೆ ಪಡೆಯೋದು.. ಇವೆಲ್ಲ ಈ ಮಂತ್ರಗಳ ಸಹಾಯದಿಂದಲೇ. ಅನೇಕರಿಗೆ ಇದು ನಂಬಲು ಸಾಧ್ಯವಾಗದ ಗೊಡ್ಡು ಕಥೆ. ಇರಲಿ, ಋಷಿಗಳು ಹರಿಸಿದ ಪರಂಪರಾಗತ ಜ್ಞಾನದ ಕುರಿತಂತೆ ಅನುಮಾನ ಹಾಗೆಯೇ ಇರಲಿ. ನಾನೀಗ ನಮ್ಮ ನಡುವಿನ ಕೆಲವು ಸಂಗತಿಗಳನ್ನು ಹಂಚಿಕೊಳ್ಳುತ್ತೇನೆ. ಹಾಗೆ ಸುಮ್ಮನೆ ಅವಲೋಕಿಸಿ.ಕೆಲ ತಿಂಗಳ ಹಿಂದೆ ಗೂರ್ಖಾ ರೆಜಿಮೆಂಟಿನ ಕರ್ನಲ್ ಎಂ.ಎನ್.ರಾಯ್ ಭಯೋತ್ಪಾದಕರೊಂದಿಗೆ ಕಾದಾಡುವಾಗ ಹುತಾತ್ಮರಾದದ್ದು ನೆನಪಿದೆಯಾ? ಖಂಡಿತ ನಾನೂ ಮರೆತಿರುತ್ತಿದ್ದೆ. ಭಯೋತ್ಪಾದಕರ ದಾಳಿಗೆ ತುತ್ತಾಗಿ ತೀರಿಕೊಂಡವರನ್ನೆಲ್ಲ ನೆನಪಿಟ್ಟುಕೊಳ್ಳುವಷ್ಟು ಕೃತಜ್ಞರಾಗಿಲ್ಲ ನಾವಿನ್ನೂ. ಆದರೆ ಈ ಸಾವನ್ನು ನಮ್ಮ ಹೃದಯದಲ್ಲಿ ಹಸಿಯಾಗಿರುವಂತೆ ಮಾಡಿದ್ದು ಕರ್ನಲ್ ಸಾಹೇಬರ ಹನ್ನೊಂದರ ಮಗಳು ಅಲಕಾ ರಾಯ್. ಸಂಸ್ಕಾರಕ್ಕೆ ಸಿದ್ಧವಾಗಿದ್ದ ತಂದೆಯ ಶವದೆದುರಿಗೆ ಉಮ್ಮಳಿಸುತ್ತಿರುವ ದುಃಖವನ್ನು ತಡೆದು ಆ ಮಗು ಸೆಲ್ಯೂಟ್ ಹೊಡೆದು ‘ಹೋಕಿ ಹೊಯ್ನಾ’ ಎಂತು. ಅದರರ್ಥ ‘ಗೂರ್ಖಾ ಸೈನಿಕ ಹುಲಿ ಹೌದೋ ಅಲ್ಲವೋ?’ ಅಂತ. ನಾಲ್ಕಕ್ಷರದ ಆ ಘೋಷ ಆ ಮಗುವಿನ ಬಾಯಿಂದ ಹೊರಡುತ್ತಿದ್ದಂತೆ ಸುತ್ತಲಿದ್ದ ಸೈನಿಕರಲ್ಲಿ ಮಿಂಚಿನ ಸಂಚಾರವಾಯ್ತು. ‘ಹೋ ಹೋ’ ಎಂದು ಪ್ರತಿಕ್ರಿಯಿಸಿದರು. ಆಮೇಲೆ ಆವೇಶದ ಘೋಷಗಳು ಎಲ್ಲೆಡೆ ಮೊಳಗಲಾರಂಭಿಸಿದವು.ಹೇಗಿದೆ ಇದು? ಹನ್ನೊಂದರ ಬಾಲೆಗೆ ತಂದೆಯನ್ನು ಕಳೆದುಕೊಂಡ ದುಃಖವನ್ನು ತಾತ್ಕಾಲಿಕವಾಗಿಯಾದರೂ ಮರೆಯುವ ಶಕ್ತಿ ಕೊಟ್ಟಿದ್ದು ‘ನಾಲ್ಕಕ್ಷರ’. ಅಚ್ಚರಿಯಲ್ಲವೇನು? ಇದನ್ನೇ ಸೈನ್ಯ ‘ವಾರ್ ಕ್ರೈ’ ಅನ್ನುತ್ತೆ. ನೀವು ಬೇಕಿದ್ದರೆ ಅದನ್ನು ರಣೋದ್ಘೋಷ ಅಥವಾ ರಣಮಂತ್ರ ಅಂತ ಕರೀರಿ. ಅದು ಯುದ್ಧಭೂಮಿಯಲ್ಲಿ ಮಾಡಬೇಕಾದ ಕೆಲಸವನ್ನು ಮಾಡಿಯೇ ಮಾಡುತ್ತದೆ.

ಖಂಡಿತ ಹೌದು.‘ಜೈ ಬಜರಂಗ ಬಲಿ’ ಎಂದರಚುತ್ತ ಬಿಹಾರ ರೆಜಿಮೆಂಟಿನ ಸೈನಿಕರು ಮುಗಿಬಿದ್ದರೆಂದರೆ ಶತ್ರುಗಳ ಕತೆ ಮುಗಿದಂತೆಯೇ. ಸಿಖ್ಖರಿಗೆ ‘ಬೋಲೆ ಸೋನಿಹಾಲ್, ಸತ್ ಶ್ರೀಅಕಾಲ್’ ಅನ್ನೋದು ಯುದ್ಧದ ಮದವೇರಿಸುವ ಅಫೀಮಿನಂತೆ. ಮರಾಠಾ ರೆಜಿಮೆಂಟಿನ ಸೈನಿಕರಿಗೆ ಶಿವಾಜಿಯ ಜೈಕಾರವೇ ಯುದ್ಧೋನ್ಮಾದ ಹೆಚ್ಚಿಸಿದರೆ, ಲಡಾಖ್ ಸ್ಕೌಟ್ಸ್‌ನವರಿಗೆ ‘ಭಾರತ್ ಮಾತಾ ಕಿ ಜೈ’ ಕೇಳಿದರೆ ಸಾಕು ಯುದ್ಧ ಸನ್ನದ್ಧರಾಗುವ ರಾಸಾಯನಿಕಗಳು ದೇಹದೊಳಗೆ ಸ್ರವಿಸಲಾರಂಭಿಸುತ್ತವೆ!ನನಗೆ ಗೊತ್ತು, ಇದನ್ನು ಮಂತ್ರವೆಂದರೆ ಅನೇಕರು ಒಪ್ಪಲಾರರು. ಇದಕ್ಕೆ ಮಂತ್ರವೊಂದಕ್ಕೆ ಇರಬಹುದಾದ ಯಾವ ಸ್ವರೂಪಗಳೂ ಇಲ್ಲ. ಆದರೆ ಮಂತ್ರವೊಂದು ನಮ್ಮ ಮೇಲೆ ಮಾಡಬಹುದಾದ ದೀರ್ಘಕಾಲೀನ ಪರಿಣಾಮವನ್ನು ನಾವು ಇವುಗಳಿಂದ ಊಹಿಸಬಹುದು. ಈ ಉದ್ಘೋಷಗಳಿಗೆ ಉಚ್ಚರಿಸುವವ ಜೋಡಿಸುವ ಉತ್ಕಟ ಭಾವನೆಯೇ ಆತನನ್ನು ಕಲ್ಲುಬಂಡೆಯಾಗಿಸಿ ಬಿಡುತ್ತದೆ. ತನ್ನ ಪ್ರಾಣವನ್ನೂ ಪಣಕ್ಕಿಟ್ಟು ಕದನ ಭೂಮಿಯಲ್ಲಿ ಕಾದಾಡುವಂತೆ ಮಾಡಿಬಿಡುತ್ತದೆ.

ಹೀಗಿರುವಾಗ ಸಾವಿರಾರು ವರ್ಷಗಳ ಹಿಂದೆ ಋಷಿಗಳು ಕಂಡುಕೊಂಡ ಮಂತ್ರವೊಂದನ್ನು ಅಷ್ಟೇ ಶ್ರದ್ಧಾ ಭಾವನೆಯಿಂದ ಜಪಿಸಿದ್ದೇ ಆದಲ್ಲಿ ಅಪರೂಪದ ಸಿದ್ಧಿಗಳು ನಮ್ಮದೇಕಾಗಬಾರದು? ಇದೊಂದು ತರ್ಕಬದ್ಧ ಪ್ರಶ್ನೆ ಅಷ್ಟೇ. ಸೈನಿಕರ ಮಾತು ಬಿಡಿ. ‘ವಂದೇ ಮಾತರಂ’ ಎಂಬ ಎರಡೇ ಎರಡು ಪದಗಳನ್ನು ಮೈ ಚಳಿ ಬಿಟ್ಟು ಒಮ್ಮೆ ಉಚ್ಚಕಂಠದಿಂದ ಕೂಗಿ ನೋಡಿ. ಮೈಯ ರಕ್ತ ಬೆಚ್ಚಗಾಗಿ ಬಿಡುತ್ತದೆ. ಒಂದೆರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಸಿಕ್ಕ ಸಾಧುವೊಬ್ಬರು ‘ವಂದೇ ಮಾತರಂ’ನ್ನು ಮಂತ್ರವೆಂದು ಕರೆದು ಬಲು ಹೊತ್ತು ವಾರ್ತಾಲಾಪ ನಡೆಸಿದ್ದರು. ಮೊದಮೊದಲಿಗೆ ಶ್ರದ್ಧೆಯಿಂದಾಗಿ ಹಾಗೆ ಹೇಳುತ್ತಿದ್ದಾರೆಂದು ಭಾವಿಸಿದರೂ ಅವರು ಕೊಟ್ಟ ಕಾರಣ ಮಾತ್ರ ಅಪರೂಪದ್ದಾಗಿತ್ತು.ಬಂಕಿಮಚಂದ್ರ ಚಟರ್ಜಿಯವರೇ ‘ವಂದೇ ಮಾತರಂ’ ಜನಕರೆಂಬುದರಲ್ಲಿ ಯಾರಿಗೂ ಅನುಮಾನವಿಲ್ಲ. ಆದರೆ ಬಂಕಿಮರು ಬ್ರಿಟಿಷರ ಕಚೇರಿಯಲ್ಲಿ ನೌಕರಿಯಲ್ಲಿದ್ದರೆಂಬುದು ಅನೇಕರಿಗೆ ಗೊತ್ತಿಲ್ಲ. ಈ ನೋವು ಅವರನ್ನು ಯಾವಾಗಲೂ ಬಾಧಿಸುತ್ತಿತ್ತು. ಒಳಗೆ ಉರಿಯುವ ದೇಶಭಕ್ತಿಯ ಬೆಂಕಿ, ಹೊರಗೆ ದಾಸ್ಯ ಕೂಪ. ಹಾಗೆ ನೋಡಿದರೆ ಸಾಕಷ್ಟು ತಪಸ್ಸು ನಡೆದಿತ್ತು. ಅದೊಮ್ಮೆ ಬಂಕಿಮರು ದಕ್ಷಿಣೇಶ್ವರದಲ್ಲಿ ಕಾಳಿಯ ಪೂಜೆ ಮಾಡಿಕೊಂಡಿದ್ದ ರಾಮಕೃಷ್ಣರನ್ನು ಭೇಟಿ ಮಾಡಿ ಕಾಲಿಗೆರಗಿದರಂತೆ. ಬಂಗಾಳಿಯಲ್ಲಿ ಬಂಕಿಮ ಚಂದ್ರನೆಂದರೆ ಬಾಗಿದ ಚಂದ್ರನೆಂಬ ಅರ್ಥ.

ವಿನೋದವಾಗಿ ರಾಮಕೃಷ್ಣರು ‘ಬಂಕಿಮ, ನೀನು ಯಾರಿಗೆ ಬಂಕಿಮ?’ ಎಂದರಂತೆ. ಕಾಲಿಗೆರಗಿ ಏಳುವ ವೇಳೆಗಾಗಲೇ ಬಂಕಿಮರ ಕಂಗಳಿಂದ ಅಶ್ರುಧಾರೆ ಹರಿಯಲಾರಂಭಿಸಿತು. ಅದೇ ಭಾವದಿಂದಲೇ ಅವರು ‘ಬ್ರಿಟಿಷರ ಬೂಟು ಕಾಲುಗಳಿಗೆ ಬಂಕಿಮ’ ಎಂದರು. ಆ ಕ್ಷಣಕ್ಕೆ ಭಾವಾವಸ್ಥೆಗೇರಿದ ರಾಮಕೃಷ್ಣರು ಬಂಕಿಮರ ಎದೆಮುಟ್ಟಿ ಹರಸಿ, ‘ನೀನುದೇಶಭಕ್ತ’ ಎಂದು ಮೂರ‍್ನಾಲ್ಕು ಬಾರಿ ಉಚ್ಚರಿಸಿದರು. ಅಷ್ಟರೊಳಗೆ ಬಂಕಿಮರ ಎದೆಗೆ ಹರಿಯಬೇಕಿದ್ದ ಶಕ್ತಿ ಮಂತ್ರರೂಪದಲ್ಲಿ ಹರಿದಾಗಿತ್ತು. ಅದೇ ‘ವಂದೇ ಮಾತರಂ’. ಹಾಗೆಂದು ಸಂತರು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದರೆ ನಾನಂತೂ ಮೈಯೆಲ್ಲಾ ಕಿವಿಯಾಗಿದ್ದೆ.‘ವಂದೇ ಮಾತರಂ’ ಮಂತ್ರ ಹೇಗಾಗಲು ಸಾಧ್ಯ? ನನ್ನ ಕಂಗಳ ಪ್ರಶ್ನೆ ಅರಿತ ಅವರು ಅದನ್ನು ‘ವಂದೇ ಮಾ ತಾರಾಂ’ ಎಂದು ಬಿಡಿಸಿಟ್ಟು ತಾರಾ ಎಂದರೆ ಅಭಯ ಪ್ರದಾತೆ ಕಾಳಿ ಎಂದ ಮೇಲಂತೂ ಮೈಮೇಲೆ ಮುಳ್ಳುಗಳೆದ್ದಿದ್ದವು.

ನಾರದರಿಂದ ರತ್ನಾಕರ ‘ಮರಾ’ ಮಂತ್ರ ಪಡೆದು ‘ರಾಮಾ’ರಾಧಕನಾಗಿ ವಾಲ್ಮೀಕಿಯಾದನೆನ್ನುವ ಕಥೆ ಒಪ್ಪುವುದೇ ಆದರೆ ತಾರಾದೇವಿಯ ಆರಾಧನೆ ಭಾರತಮಾತೆಯ ಪೂಜೆಗೆ ಶ್ರೇಷ್ಠ ಮಂತ್ರವೇಕಾಗಿರಬಾರದು?ಬಂಕಿಮರು ಈ ಮಂತ್ರದ ಜಾಡು ಹಿಡಿದು ಅದನ್ನು ವಿಸ್ತಾರಗೊಳಿಸಿದರು. ಪಲ್ಲವಿ-ಚರಣಗಳು ರಚನೆಯಾದವು. ಭಾರತಮಾತೆ ಅವರ ಕಣ್ಣೆದುರಿಗೆ ದುರ್ಗೆಯಾಗಿ, ಶತ್ರುಮರ್ದಕಳಾಗಿ ಕಂಗೊಳಿಸಿದಳು. ಬಂಕಿಮರು ಗೀತೆಗೆ ನಿಲ್ಲಲಿಲ್ಲ. ಈ ಮಂತ್ರದೊಂದಿಗೆ ಬೆಳೆಯಬೇಕಿದ್ದ ಶ್ರದ್ಧೆಯ ಭಾಗವನ್ನು ಪೂರ್ಣಗೊಳಿಸಲು ‘ಆನಂದಮಠ’ವೆಂಬ ಕಾದಂಬರಿಯನ್ನೇ ರಚಿಸಿ ಸಮಾಜದೆದುರಿಗಿಟ್ಟರು. ಇಡೀ ಕಾದಂಬರಿಯ ಸಾರಸಂಗ್ರಹವೇ ಗೀತೆಯಾಗಿತ್ತು.

ಆ ಗೀತೆಯನ್ನು ಸಾಂದ್ರಗೊಳಿಸಿ ಹಿಡಿದಿಟ್ಟರೆ ಅದು ಎರಡೇ ಪದವಾಯ್ತು- ‘ವಂದೇ ಮಾತರಂ’. ಹಾಗಂತ ಎಲ್ಲವೂ ಅಂದುಕೊಂಡಂತೆ ಏಕಾಏಕಿ ನಡೆಯಲಿಲ್ಲ. ಒಂದು ಹಂತದಲ್ಲಂತೂ ಹತಾಶರಾದ ಬಂಕಿಮರು ಪತ್ರಿಕೆಯ ಸಂಪಾದಕರೊಬ್ಬರಿಗೆ ಪತ್ರ ಬರೆದು ’ಆನಂದಮಠ ಬರೆದು ನಾನೇನು ಮಾಡಿಯೇನು? ಈ ಈರ್ಷ್ಯಾ ಪರವಶರೂ, ಆತ್ಮೋದರಪರಾಯಣರೂ ಆದ ಜನಕ್ಕೆ ಉನ್ನತಿ ಇಲ್ಲ. ‘ವಂದೇ ಉದರಂ’ ಎನ್ನಿ’ ಎಂದು ಆಕ್ರೋಶ ತೋಡಿಕೊಂಡಿದ್ದರು. ತಮಗಾದ ಮಂತ್ರದರ್ಶನ ವ್ಯರ್ಥವೇ ಎಂಬ ಭಾವನೆ ಅವರನ್ನು ಕಾಡಿರಲು ಸಾಕು. ಆದರೆ ಋಷಿರೂಪಿ ಬಂಕಿಮರು ಮಗಳ ಬಳಿ ‘ಮುಂದಿನ ಎರಡು-ಮೂರು ದಶಕಗಳ ನಂತರ ಬಂಗಾಲವಿಡೀ ಈ ಮಂತ್ರದಿಂದ ಹುಚ್ಚೆದ್ದು ಹೋಗುತ್ತದೆ’ ಎಂದು ದೃಢನಿಶ್ಚಯದಿಂದಲೇ ಹೇಳಿದ್ದರು.ಅಂದುಕೊಂಡದ್ದಕ್ಕಿಂತ ಹೆಚ್ಚೇ ಆಯಿತು. ಬಂಗಾಳವಷ್ಟೇ ಅಲ್ಲ, ಇಡೀ ದೇಶ ವಂದೇ ಮಾತರಂ ಅನುರಣನದಿಂದ ಕಂಪಿಸಲಾರಂಭಿಸಿತು.

ದಾಸ್ಯವನ್ನು ಕಿತ್ತೆಸೆಯುವ ಕಲ್ಪನೆಯಿಂದ ಸೃಜಿಸಲ್ಪಟ್ಟ ಮಂತ್ರ ಜನರ ಕಂಠಗಳಿಂದ ಮಾರ್ದನಿಸಿತು, ರಣಘೋಷವಾಯಿತು. ಬಾಲಕರಿಂದ ಹಿಡಿದು ಮುದುಕರವರೆಗೆ ಬ್ರಿಟಿಷರ ಲಾಠಿ ಏಟುಗಳಿಗೆ ಜನ ಎದೆಕೊಟ್ಟರು. ಮಂತ್ರದ ಘೋಷಣೆಯಾಗುತ್ತಿದ್ದಂತೆ ಕಾಳಿಯ ಆವೇಶ ಮೈ ಹೊಕ್ಕುತ್ತಿತ್ತು. ಏಟು ತಿನ್ನುವುದು ಬಿಡಿ, ನೇಣಿಗೇರುವಾಗಲೂ ನಗುನಗುತ್ತಲೇ ಇರುವುದು ಸಾಧ್ಯವಾಗುತ್ತಿತ್ತು. ಹೌದಲ್ಲ. ಮಂತ್ರ; ಅದನ್ನು ಸೃಜಿಸಿದವನ ಕಠಿಣ ತಪಸ್ಸು ಮತ್ತು ಉಚ್ಚರಿಸುವವನ ಅಖಂಡ ಶ್ರದ್ಧೆ ಇವೆಲ್ಲ ಒಂದಾದರೆ ಅನೂಹ್ಯವಾದುದು ಘಟಿಸಿಬಿಡುತ್ತದೆ. ಬಂಕಿಮರ ಉದಾಹರಣೆಯೇ ಇಷ್ಟು ರೋಚಕವಾದುದೂ, ಫಲಿತಾಂಶ ಕೊಡುವಂತಹುದೂ ಆಗಿರುವಾಗ ಇನ್ನು ಪ್ರಾಚೀನ ಋಷಿಗಳ ಕಾಣ್ಕೆಯ ಮಂತ್ರಗಳ ಶಕ್ತಿ ಎಂಥದ್ದಿರಬೇಡ? ಒಮ್ಮೆ ಮನಸ್ಸೊಳಗೆ ಹೊಕ್ಕು ಶ್ರದ್ಧೆ ಎಷ್ಟಿದೆಯೆಂದು ಲೆಕ್ಕ ಹಾಕಿ ನೋಡಬೇಕಷ್ಟೇ.ಹಾಂ! ದೆಹಲಿಯ ಆ ಸಾಧು ವಂದೇ ಮಾತರಂ ಬಗ್ಗೆ ಮಾತನಾಡುತ್ತ ಒಂದು ಮಂತ್ರ ಸೃಷ್ಟಿಯಾಗಿ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿತು, ಮತ್ತೊಂದು ಪ್ರಾಚೀನ ಮಂತ್ರ ವಿರೂಪಗೊಂಡು ದೇಶ ತುಂಡಾಯ್ತು ಅಂದರು. ನನ್ನ ಕಿವಿ ನೆಟ್ಟಗಾಯ್ತು. ಅವರು ‘ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್’ ಎಂದೊಡನೆ ಮುಂದಿನ ಸಾಲು ನೆನೆದು ಒಮ್ಮೆ ಬೆಚ್ಚಿ ಬೀಳುವಂತಾಯ್ತು.ಮಂತ್ರಗಳು ಮಾನವ ಸಂವೇದನೆಗಳ ಮೇಲೆ ಮಾಡುವ ಇಷ್ಟೆಲ್ಲ ಪ್ರಭಾವ ಅರಿತ ನಂತರವೂ ಸಾಧುಗಳ ಮಾತಿಗೆ ಎದುರಾಡುವ ಶಕ್ತಿ ನನಗಿರಲಿಲ್ಲ.

(ಲೇಖಕರು ಖ್ಯಾತ ವಾಗ್ಮಿ, ಚಿಂತಕರು)

No comments:

Post a Comment